777 Charlie – ಮನುಷ್ಯನ ಭಾವನೆಗಳಿಗೆ ಸವಾಲೆಸೆಯೋ, ಭಾವನೆಗಳು ಬರಿ ಮನುಷ್ಯರ ನಡುವೆಯೇ ಇರುತ್ತದೆಯೇ?, ಪ್ರಾಣಿಗಳು ಇದರ ಹೊರತಾಗಿವೆ ಪ್ರಾಣಿಗಳೂ ಮನುಷ್ಯನ ಹಾಗೆ ಭಾವನೆಗಳನ್ನು ಕಾಪಿಟ್ಟುಕೊಳ್ಳುತ್ತವೆ ಎಂದು ತಿಳಿಸುವ ಚಿತ್ರ.
ಚಿಕ್ಕ ವಯಸ್ಸಿನಲ್ಲಿಯೇ ತನ್ನ ಕುಟುಂಬವನ್ನೆಲ್ಲಾ ಕಾರು ಅಪಘಾತದಲ್ಲಿ ಕಳೆದುಕೊಳ್ಳುವ ನಾಯಕ(ಧರ್ಮ) ಯಾವುದೇ ಭಾವನೆಗಳಿಲ್ಲದೆ ಬೆಳೆದು ಬಿಡುತ್ತಾನೆ. ಚಿತ್ರದಲ್ಲಿ ತಾನೇ ಹೇಳಿಕೊಳ್ಳುವ ಹಾಗೆ ಮನೆ, ಇಡ್ಲಿ, ಬಿಯರ್, ಸಿಗರೇಟ್, ಫ್ಯಾಕ್ಟರಿ ಹೊರತು ಯಾವುದಕ್ಕೂ ತಲೆಕೆಡಿಸಿಕೊಳ್ಳದ ವರಟು ವ್ಯಕ್ತಿತ್ವ. ಹಾಗೇ ದಾರಿಯಲ್ಲಿ ನಡೆದು ಬರುವಾಗ ರಸ್ತೆ ಅಪಘಾತದಲ್ಲಿ ಅವನಿಗೆ ಸಿಗುವ ಚಾರ್ಲಿ, ಅದನ್ನು ಅಡಾಪ್ಟ್ ಮಾಡಿಕೊಳ್ಳುವಷ್ಟು ಸಮಯದಲ್ಲಿ ತನ್ನಲ್ಲೇ ಅದನ್ನು ಉಳಿಸಿಕೊಳ್ಳುತ್ತಾನೆ. ಆ ಸಮಯದಲ್ಲಿ ಅದರ ತರಲೆ, ಕಾಟ ತಡೆದುಕೊಳ್ಳುತ್ತಾ ತನ್ನ ಜೀವನದ ಹೊಸ ರೂಪುರೇಷೆಯನ್ನು ತಾನೇ ಕಂಡುಕೊಳ್ಳುತ್ತಾನೆ.
ಆ ಪ್ರಾಣಿಯೊಂದಿಗೆ ಕುಟುಂಬವನ್ನು ಕಂಡುಕೊಳ್ಳುತ್ತಾನೆ. ನಗುವೇ ಇರದವನ ಬಾಳಿನಲಿ ನಗು ತರಿಸುವ ಕಾರ್ಯದಲ್ಲಿ ಚಾರ್ಲಿ ಹಾಗೂ ಎದುರು ಮನೆ ಮಗು ಜೊತೆಗಿನ ನಟನೆ ಚೆನ್ನಾಗಿ ಮೂಡಿಬಂದಿದೆ. ಹೀಗೆ ಖುಷಿಯಾಗಿ ಇರುವವನ ಬಾಳಿನಲಿ ಚಾರ್ಲಿಗೆ ಕ್ಯಾನ್ಸರ್ ಎಂಬ ದೊಡ್ಡ ತೆರೆ ಅಪ್ಪಳಿಸಿ ಬದುಕನ್ನು ಬದಲಾಯಿಸುತ್ತದೆ. ಮೊದಲಾರ್ಧ ಹಾಸ್ಯ ಮಯವಾಗಿದ್ದು ಸಮಯ ಕಳೆಯುವುದೇ ಗೊತ್ತಾಗುವುದಿಲ್ಲ.
A Tale of Dharmaraya in Kaliyuga
ಚಾರ್ಲಿಯ ಆಸೆಯಂತೆ ಅದನ್ನು ಹಿಮಾಲಯಕ್ಕೆ ಕರೆದೊಯ್ಯುವ ಕಥೆಯೇ ಮುಂದಿನ ಭಾಗ. ತನ್ನದೇ ಬೈಕ್ನಲ್ಲಿ ಧರ್ಮ ಮತ್ತು ಚಾರ್ಲಿಯ ಪಯಣ ಶುರುವಾಗುತ್ತದೆ. ಪ್ರಾಣಿಗಳನ್ನು ತಮ್ಮ ಹಣದ ದುರಾಸೆಗಾಗಿ ತಳಿ ನವೀಕರಣದಲ್ಲಿ ಆಗುವ ತೊಡಕುಗಳು ಹಾಗೂ ಆ ವೈರಿಗಳ ಕೊನೆ, ತನ್ನ ತಪ್ಪು ತಿಳುವಳಿಕೆಯಿಂದ ಮತ್ತೆ ನಾಯಕನನ್ನು ಸೇರುವ ನಾಯಕಿ, ಧರ್ಮ ಮತ್ತು ಚಾರ್ಲಿಯ ಅಡ್ವೆಂಚರ್, A tale of Dharmaraya in Kaliyuga ದ ಧರ್ಮನ ಯಶೋಗಾಥೆ, ಚಾರ್ಲಿ ಮತ್ತು ಕರಪ್ಪುವಿನ ಸರಸ, ಚಾರ್ಲಿಯ ಆಸೆಯನ್ನು ಈಡೇರಿಸುವಲ್ಲಿ ಧರ್ಮನ ಒದ್ದಾಟ, ಮಂಜಿನಲ್ಲಿ ಧರ್ಮ ಚಾರ್ಲಿಯ ಖುಷಿಯ ನೆಗೆದಾಟ ಇವೆಲ್ಲವನ್ನೂ ನೀವು ಚಿತ್ರ ಮಂದಿರದಲ್ಲಿ ನೋಡಿಯೇ ಸವಿಯಬೇಕು.
ರಕ್ಷಿತ್ ಶೆಟ್ಟಿಯ ಮಾರ್ಮಿಕ ನಟನೆ, ಚಾರ್ಲಿಯ ಭಾವನಾತ್ಮಕತೆ, ಆರ್ವಿ ಮತ್ತು ಚಾರ್ಲಿಯ ಮುಗ್ಧತೆ, ಪ್ರಾಣಿ ಸಂರಕ್ಷಣಾ ಅಧಿಕಾರಿಯಾಗಿ ನಾಯಕಿಯ ಕಾಳಜಿಯ ಪಾತ್ರ ಎಲ್ಲವೂ ಅತ್ಯಂತ ಚೆನ್ನಾಗಿ ಮೂಡಿಬಂದಿವೆ. ಉಳಿದೆಲ್ಲ ಪಾತ್ರಗಳು ಕಥೆಗೆ ಪೂರಕ. ಇನ್ನು ಸಂಧರ್ಭ ಮತ್ತು ಸ್ಥಳಕ್ಕೆ ತಕ್ಕಂತೆ ಸಂಗೀತ ಚೆನ್ನಾಗಿ ಮೂಡಿಬಂದಿದೆ, ಜೊತೆಗೆ ಎರಡು ಮೂರು ಭಾಷೆಯ ಹಾಡುಗಳ(ಸ್ಥಳಕ್ಕೆ ತಕ್ಕಂತೆ) ಸಂಯೋಜನೆ ಕನ್ನಡಕ್ಕೆ ಹೊಸದು ಮತ್ತು ವಿಶೇಷ ಇದಕ್ಕೆ ಸಂಗೀತ ನಿರ್ದೇಶಕನ ಪ್ರತಿಭೆಗೆ ಹಿಡಿದ ಕೈಗನ್ನಡಿ.
ಹಿನ್ನಲೆ ಸಂಗೀತ ಭಾವನಾತ್ಮಕ. ನಿರ್ದೇಶಕನ ಸಂಯಮಕ್ಕೆ ಒಂದು ಮೆಚ್ಚುಗೆ ಇರಲೇಬೇಕು ಕಾರಣ ಮನುಷ್ಯರ ನಟನೆ ಸಹಜ ಆದರೆ ಪ್ರಾಣಿಗಳ ಜೊತೆ ನಟನೆ ಮಾಡಿಸುವುದು ತುಂಬಾ ಸವಾಲಿನ ಕಾರ್ಯ. ಹಲವಾರು ಪ್ರಾಣಿ ಕಥೆಯಾಧಾರಿತ ಚಿತ್ರಗಳನ್ನು ನೋಡಿದ್ದೇವೆ ಆದರೆ ರಕ್ಷಿತ್ ಶೆಟ್ಟಿಯ ನೈಜ ನಟನೆ, ಚಾರ್ಲಿಯ ಭಾವನಾತ್ಮಕತೆ, ನಿರ್ದೇಶಕನ ಕೈಚಳಕ, ಅಚ್ಚುಕಟ್ಟಾದ ಕಥೆ, ನೈಜ ಚಿತ್ರಣ, ಮಾನವ ಮತ್ತು ಪ್ರಾಣಿಗಳ ನಡುವಿನ ಮಾನವೀಯ ಧ್ಯೇಯ ಸಿನಿಮಾಕ್ಕೆ ವಿಶಿಷ್ಟ ರೂಪ ನೀಡುತ್ತದೆ.
ಇತ್ತೀಚಿನ ಮಾಡರ್ನ್ ಯುಗದೊಳಗೆ ಮನುಷ್ಯರ ನಡುವಿನ ಭಾವನಾತ್ಮಕ ಬಂಧಗಳೆ ತಲೆಕಚ್ಚುತಿರುವಾಗ, ಮಾನವರೆಲ್ಲ ಮಷೀನ್ಗಳಾಗಿರುವಾಗ ಮಾನವೇತರ ಮಾನವೀಯ ಸಂಬಂಧವನ್ನು ಸಾರುವ ಕಥೆ ಅತ್ಯಾಕರ್ಷಕವಾಗಿದೆ. ಅದನ್ನು ನಿರೂಪಿಸುವಲ್ಲಿ ಚಿತ್ರ ತಂಡದ ಶ್ರಮ, ಮೊದಲನೇ ಚಿತ್ರದಲ್ಲಿ ನಿರ್ದೇಶಕರ ಕೌಶಲ್ಯ ಮೆಚ್ಚುವಂಥದ್ದು. ನಿರ್ದೇಶಕ ಮೊದಲಾರ್ಧದಲ್ಲಿ ಹೊಟ್ಟೆ ಹುಣ್ಣಾಗುವಂತೆ ನಗಿಸಿ ಮುಂದಿನ ಭಾಗದಲ್ಲಿ ಎಲ್ಲರ ಕಣ್ಣಲ್ಲಿ ತಿಳಿನೀರ ಪರದೆ ಮೂಡಿಸುವಲ್ಲಿ ಸಶಕ್ತವಾಗಿದ್ದಾರೆ. ಚಾರ್ಲಿ ಮತ್ತು ಧರ್ಮನ ಸ್ವಾರಸ್ಯಕರ ಬಂಧವನ್ನು ಶ್ವಾನ ಸ್ಪರ್ಧೆಯಲ್ಲೇ ನೋಡಿ ಸವಿಯಬೇಕು. ದೇವನ ಸೃಷ್ಟಿ ಮತ್ತು ಭಾವುಕತೆ ಅದ್ವಿತೀಯ ಮತ್ತು ಅಖಂಡ ಎಂಬ ಕೊನೆಯ ವಿಶ್ವ ಸಂದೇಶ ಸ್ಪುರವಾಗಿ ರೂಪಿಸಿಕೊಟ್ಟಿದ್ದಾರೆ.
ಇತ್ತೀಚಿನ ಕ್ರೌರ್ಯ, ಮೆರೆದಾಟ, heroism ಚಿತ್ರಗಳ ನಡುವೆ ಭಾವನಾತ್ಮಕ ಸಂಬಂಧವನ್ನು ತಿಳಿಸುವ ಚಿತ್ರವನ್ನು ಚಿತ್ರಮಂದಿರದಲ್ಲಿ ಸವಿಯಿರಿ ಎನ್ನುವುದು ನನ್ನ ಆಶಯ.